ಹೆಬ್ರಿ : ಹೆಬ್ರಿಯ ಕುಚ್ಚೂರು ಶಾಂತಿನಿಕೇತನ ಯುವವೃಂದ ವತಿಯಿಂದ ಮುಖ್ಯಸ್ಥ ರಾಜೇಶ್ ಕುಡಿಬೈಲು ನೇತ್ರತ್ವದಲ್ಲಿ ನಿರಂತರವಾಗಿ ಯಶಸ್ವಿಯಾಗಿ ನಲಿಕಲಿ ಚಟುವಟಿಕೆ ನಡೆಯುತ್ತಿದೆ.
ಸಮಾನ ಮನಸ್ಕ ಯುವಕರ ಸಂಘಟನೆ ಹೆಬ್ರಿ ತಾಲ್ಲೂಕಿನ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ ವತಿಯಿಂದ ಸದ್ದಿಲ್ಲದೆ ನಿರಂತರವಾಗಿ ಅನೇಕ ಜನಸೇವಾ ಕಾರ್ಯಕ್ರಮಗಳು ನಡೆಯುತ್ತಿದೆ. ಕೊರೊನಾ ಕಂಟಕ ಆರಂಭಗೊಂಡ ಬಳಿಕ ಗ್ರಾಮೀಣ ಪ್ರದೇಶದ ಮಕ್ಕಳ ಮುಂದಿನ ಶಿಕ್ಷಣ ಸಮಸ್ಯೆಯಾಗಬಾರದು, ಮಕ್ಕಳಿಗೆ ತಮ್ಮ ಮನೆಯ ಬಳಿಯಲ್ಲೇ ಶಿಕ್ಷಣ ದೊರೆಯಬೇಕು, ಕೊರೊನಾ ರಜೆಯು ಮನೆಮಂದಿಗೂ ಸಜೆಯಾಗಬಾರದು, ಮಕ್ಕಳು ಕೂಡ ರಜೆಯ ಮಜಾದಿಂದ ಕಲಿಕೆ ಒಲವಿನಿಂದ ದೂರ ಉಳಿಯಬಾರದು ಎಂದು ಯುವ ವೃಂದದ ಮುಖ್ಯಸ್ಥ ರಾಜೇಶ್ ಕುಡಿಬೈಲು ನೇತ್ರತ್ವದಲ್ಲಿ ಹೆಬ್ರಿ ತಾಲ್ಲೂಕಿನ ವಿವಿದೆಡೆ ಇದೇ ಜುಲೈ 143 ರಿಂದ ಮಕ್ಕಳ ನಲಿಕಲಿ ಚಟುವಟಿಕೆಗೆ ಆರಂಭಗೊಂಡಿದ್ದು ಯಶಸ್ವಿಯಾಗಿ ನಡೆಯುತ್ತಿದೆ.
ಪ್ರತಿದಿನ ವೇಳಾ ಪಟ್ಟಿಯಂತೆ ಮುಂಜಾನೆ ಪ್ರೌಢಶಾಲಾ ಮಕ್ಕಳಿಗೆ ಯೋಗ, ವ್ಯಾಯಾಮ, 9 ಗಂಟೆಯ ಬಳಿಕ ಸಣ್ಣ ಮಕ್ಕಳಿಗೆ ಯೋಗ ವ್ಯಾಯಾಮ, 9ರಿಂದ 12ರ ತನಕ ಪಾಠ ಸಹಿತ ಕಲಿಕೆಯ ಕಾರ್ಯ, ಸಂಜೆ ೬.೩೦ರಿಂದ ೭.೩೦ರ ತನಕ ಪ್ರಾಣಾಯಾಮ ಮತ್ತು ಭಜನೆ ನಡೆಯುತ್ತದೆ ಎಂದು ಎಂದು ಮಕ್ಕಳ ನಲಿಕಲಿ ಕಾರ್ಯಕ್ರಮದ ರೂವಾರಿ ಯುವವೃಂದದ ಮುಖ್ಯಸ್ಥರಾದ ಶಿಕ್ಷಣ ಪ್ರೇಮಿ ರಾಜೇಶ್ ಕುಡಿಬೈಲು ತಿಳಿಸಿದರು.
ಪ್ರತಿದಿನವೂ ವಂದೇ ಮಾತರಂ, ರಾಷ್ಟ್ರಗೀತೆ ಹಾಡಿಸಿ ದಿನಕ್ಕೊಬ್ಬರಿಂದ ಕನ್ನಡ ಮತ್ತು ಇಂಗ್ಲೀಷ್ ದಿನಪತ್ರಿಕೆ ಓದಿಸಲಾಗುತ್ತದೆ.
ಕಲಿಕಾ ಚಟುವಟಿಕೆಯಲ್ಲಿ ದಿನಕ್ಕೊಂದು ವಿಷಯದ ಕಲಿಕೆ, ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನು ಮಕ್ಕಳಿಗೆ ತೋರಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಜ್ಞಾನ, ಅದಕ್ಕಾಗಿ ನಿತ್ಯ ಸಾಮಾನ್ಯ ಜ್ಞಾನದಹತ್ತು ಪ್ರಶ್ನೆಗಳು, ಶನಿವಾರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ರಾಜೇಶ್ ಕುಡಿಬೈಲು ತಿಳಿಸಿದರು.ವಾರಕ್ಕೊಂದು ಸ್ಪರ್ಧೆ ನಡೆಸಿ ಬಹುಮಾನಗಳನ್ನು ನೀಡಿ ಮಕ್ಕಳ ಸಭಾ ಕಂಪನ ದೂರ ಮಾಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಮಕ್ಕಳಿಗೆ ನಾಯಕತ್ವದ ಗೂವನ್ನು ಬೆಳೆಸುವ ಉದ್ದೇಶದಿಂದ ಹೆಚ್ಚು ಅಂಕ ಪಡೆಯುವ ಮಕ್ಕಳನ್ನು ನಾಯಕರನ್ನಾಗಿ ಆರಿಸಲಾಗುತ್ತಿದೆ.
ಕುಚ್ಚೂರು ಪರಿಸರದ ಕಲಿಕೆಯಯ ನೇತ್ರತ್ವವನ್ನು ಯುವ ವೃಂದದ ಮುಖ್ಯಸ್ಥರಾದ ರಾಜೇಶ್ ಕುಡಿಬೈಲು ವಹಿಸಿದ್ದರೆ, ರಶ್ಮಿ ಕಡ್ತಲ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅತೀ ಶೀಘ್ರವಾಗಿ ಕುಚ್ಚೂರು ಶಾಂತಿನಿಕೇತನ ಯುವ ವೃಂದ ಪ್ರಾಯೋಜಕತ್ವದಲ್ಲಿ ಶಾಂತಿನಿಕೇತನ ಸಹಕಾರ ಸಂಘವು ಕೂಡ ಶುಭಾರಂಭಗೊಳ್ಳಲಿದೆ. ಆ ಮೂಲಕ ಶಿಕ್ಷಣಕ್ಕೆ ಇನ್ನಷ್ಟು ಒತ್ತು ನೀಡುವ ಇರಾದೆಯನ್ನು ರಾಜೇಶ್ ಹೊಂದಿದ್ದಾರೆ.
ಶಾಂತಿ ನಿಕೇತನದಿಂದ ನಮಗೆ ಹೆಚ್ಚಿನ ಪ್ರಯೋಜನ : ಶಾಂತಿನಿಕೇತನ ನಲಿಕಲಿ ಚಟುವಟಿಕೆಯಿಂದ ನಾವು ಉತ್ತಮ ಸಮಯ ಪಾಲನೆಯ ಜೊತೆಗೆ ಪಾಠ ಸಾಮಾನ್ಯ ಜ್ಞಾನ, ಮಂತ್ರ ಹಾಗೂ ಯೋಗವನ್ನು ಕಲಿಯುತ್ತಿದ್ದೇವೆ. ನಮಗೆ ಇದರಿಂದ ಶಿಸ್ತು ಮತ್ತು ಆತ್ಮ ವಿಶ್ವಾಸ ಹೆಚ್ಚಿದೆ ಎಂದು ಸೌಜನ್ಯ 9ನೇ ತರಗತಿ ವಿದ್ಯಾರ್ಥಿ ಹೇಳಿದ್ದಾಳೆ.
ಮಕ್ಕಳ ಕಲಿಯುವ ಒಲವು ದೂರ ಆಗಬಾರದು,
ಕೊರೊನಾ ಕಾರಣದಿಂದ ಮಕ್ಕಳು ಮನೆಯಲ್ಲಿ ಸಮಯ ವ್ಯರ್ಥ ಮಾಡಬಾರದು, ಮಕ್ಕಳ ಕಲಿಕೆಯ ಒಲವು ದೂರ ಆಗಬಾರದು, ಕಲಿಕೆಯೊಂದಿಗೆ ಇರಬೇಕು ಎಂಬ ಮಹತ್ವದ ಉದ್ದೇಶದಿಂದ ನಾವು ಶಾಂತಿನಿಕೇತನ ನಲಿಕಲಿ ಚಟುವಟಿಕೆಯನ್ನು ಆರಂಬಿಸಿದ್ದೇವೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸಿ ಸ್ಪರ್ಧಾತ್ಮಕ ಪ್ರಪಂಚದ ಅರಿವು ಮೂಡಿಸಲು ನಮ್ಮದೊಂದು ಸಣ್ಣ ಪ್ರಯತ್ನ ಎಂದು ರಾಜೇಶ್ ಕುಡಿಬೈಲ್ ಹೇಳಿದ್ದಾರೆ.