ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಒಂದು ವಾರದ ಹಿಂದೆ ಕೆಎಫ್ಸಿ ಹೋಟೆಲ್ ಬಳಿ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಸಿಗರೇಟ್ ಕೇಳುವ ನೆಪದಲ್ಲಿ ಅಡ್ಡಗಟ್ಟಿ ಬೆದರಿಸಿ ವಾಚ್, ನಗದು ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಶಿವಮೊಗ್ಗ ನಿವಾಸಿ ಆಶಿಫ್ (24) ಹಾಗೂ ದಸ್ತಗೀರ್ ಬೇಗ್ (24) ಆರೋಪಿಗಳು ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ಭಾನುವಾರ ಬೆಳಗ್ಗೆ ಮಣಿಪಾಲದಲ್ಲಿ ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಚಾಕು ಹಾಗೂ ಮುಂಬೈ ನೋಂದಾಣಿಯುಳ್ಳ ಕಾರನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದೇನೆ ಎಂದು ಎಸ್ಪಿ ವಿಷ್ಣುವರ್ಧನ್ ಹೇಳಿದ್ದಾರೆ.
ಭಾನುವಾರ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ, ಆರೋಪಿ ಆಶಿಫ್ ವಿರುದ್ಧ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ.ಆರೋಪಿಗಳ ಜೊತೆಗಿದ್ದ ಒಬ್ಬ ತಲೆ ಮರೆಸಿಕೊಂಡಿರುವ ಆರೋಪಿತನ ಸುಳಿವು ಸಿಕ್ಕಿದ್ದು, ತನಿಖೆ ದೃಷ್ಟಿಯಿಂದ ಹೆಸರು ಬಹಿರಂಗ ಪಡಿಸುತ್ತಿಲ್ಲ ಎಂದು ತಿಳಿಸಿದರು
ಜ. 31, ತಡರಾತ್ರಿ 12.15 ಕ್ಕೆ ಮಣಿಪಾಲ ಕೆಎಫ್ಸಿ ಬಿಲ್ಡಿಂಗ್ ಬಳಿಯಲ್ಲಿದ್ದ ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಮೂವರು ಆರೋಪಿಗಳು ಕಂಡಿದ್ದಾರೆ. ಸ್ಥಳದಲ್ಲಿ ಬೇರೆ ಯಾರು ಇಲ್ಲದೇ ಇರುವುದರಿಂದ ಕಾರು ನಿಲ್ಲಿಸಿ ಸಿಗರೇಟ್ ಕೇಳುವ ನೆಪದಲ್ಲಿ ವಿದ್ಯಾರ್ಥಿನಿಯ ಬಳಿ ಬಂದು ಅವಳ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ ಅವರ ಬಳಿಯಲ್ಲಿದ್ದ 2 ಮೊಬೈಲ್, 250 ರೂ. ನಗದು ಹಾಗೂ ಇಯರ್ ಫೋನ್ ಸುಲಿಗೆ ಮಾಡಿ ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತಂಡ ರಚಿಸಿ ಆರೋಪಿಗಳ ಬೆನ್ನತ್ತಿದ ಪೊಲೀಸರು ಮುಂಬೈ, ಥಾಣೆ, ಬೆಂಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಸುಧಾಕರ್ ನಾಯ್ಕ್, ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ ಎಂ. ಪೊಲೀಸ್ ಉಪನಿರೀಕ್ಷಕ ರಾಜ್ಶೇಖರ್ ವಂದಲಿ, ಪ್ರೊಬೆಷನರಿ ಪಿಎಸ್ಐ ನಿರಂಜನ್ ಗೌಡ, ದೇವರಾಜ ಬಿರದಾರ, ಉಪಸ್ಥಿತರಿದ್ದರು.ಮತ್ತು ಮಣಿಪಾಲ ಠಾಣೆಯ ಸಿಬ್ಬಂದಿಗಳು ಈ ಕಾರ್ಯಚರಣೆ ಭಾಗವಹಿಸಿದ್ದರು.