ಆಟಿ ತಿಂಗಳು ಕಳೆದು ಸೋಣ ತಿಂಗಳು ಪ್ರಾರಂಭವಾಗುತ್ತಿದ್ದಂತೆ ತುಳುನಾಡಿನಾದ್ಯಂತ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. ಆಟಿ ತಿಂಗಳಿನಲ್ಲಿ ದೈವ ದೇವರುಗಳು ಘಟ್ಟಕ್ಕೆ ಹೋಗುತ್ತಾರೆ ಎಂದು ಪ್ರತೀತಿ. ಹೀಗಾಗಿ ದೈವಸ್ಥಾನ, ಗರಡಿಗಳ ಬಾಗಿಲುಗಳು ಮುಚ್ಚಿರುತ್ತದೆ. ಸೋಣ ಮಾಸದ ಸಂಕ್ರಾಂತಿಯ ದಿನದಂದು ದೈವದೇವರುಗಳು ಘಟ್ಟದಿಂದ ತುಳುನಾಡಿಗೆ ಬರುತ್ತಾರೆಂದು ಹಿರಿಯರ ನಂಬಿಕೆ. ಹೀಗಾಗಿ ದೈವದೇವಸ್ಥಾನಗಳ ಬಾಗಿಲುಗಳನ್ನು ತೆರೆಯುತ್ತಾರೆ ಮತ್ತು ಪ್ರತೀ ಮನೆಯಲ್ಲಿ ಹೊಸ್ತಿಲು ಪೂಜೆ ಮಾಡಿ ದೈವದೇವರುಗಳನ್ನು ಸ್ವಾಗತಿಸುತ್ತಾರೆ.
ಸುಮಾರು 10-12 ದಿನಗಳ ಹಿಂದೆ ಹುರುಳಿ ಬೀಜವನ್ನು ಮಣ್ಣಿನಲ್ಲಿ ಬಿತ್ತನೆ ಹಾಕಿ ಮೊಳಕೆಯೊಡೆಯುವಂತೆ ಮಾಡುತ್ತಾರೆ. ಇದನ್ನು ಕೊಲಪ್ಪು ಎಂದು ಕರೆಯುತ್ತಾರೆ ಮತ್ತು ಅದಕ್ಕೆ ಇಂದು ಪೂಜೆಯನ್ನು ಮಾಡಿ ಎಲ್ಲರು ಕೈಮುಗಿಯುವ ಸಂಪ್ರದಾಯ ತುಳುನಾಡಿನಲ್ಲಿ ಪ್ರಸಿದ್ದಿಯನ್ನು ಪಡೆದಿದೆ.